ಮಹಾನ್ ಕಲಾವಿದನಾದ ನಟ ದಿಲೀಪ್ ರಾಜ್ ಅವರು

ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರೋ ನಟ ದಿಲೀಪ್ ರಾಜ್ ಅವರು ಇದೀಗ ಬಹಳ ವರ್ಷಗಳ ಗ್ಯಾಪ್ ನಂತರ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹೊಸ ಚಿತ್ರದ ಹೆಸರು ಮಹಾನ್ ಕಲಾವಿದ. ಈ ಚಿತ್ರದಲ್ಲಿ ದಿಲೀಪ್ ರಾಜ್ ಅವರು ನಟನಾಗಿಯೇ ಕಾಣಿಸಿಕೊಂಡಿದ್ದಾರೆ.ನೈಜ ಬದುಕಿನಲ್ಲಿ ಒಬ್ಬ ಕಲಾವಿದನ ಬದುಕು ಹೇಗಿರುತ್ತೆ. ಬೆಳ್ಳಿತೆರೆಯಲ್ಲಿ ಮಿಂಚುವ ನಟ ತನ್ನ ವೈಯಕ್ತಿಕ ಬದುಕು ಯಾವೆಲ್ಲಾ ರೀತಿ ಕಷ್ಟ ಕೋಟಲೆಗಳನ್ನ ಒಳಗೊಂಡಿರುತ್ತೆ. ಅವಕಾಶ ಇದ್ದಾಗ ನಕ್ಷತ್ರದಂತೆ ಮಿಂಚುವ ನಟ ಅವಕಾಶ ಇಲ್ಲದೆ ಇದ್ದಾಗ ಯಾವ ರೀತಿ ಖಿನ್ನತೆಗೆ ಒಳಗಾಗಿ ತನ್ನ ದಾಂಪತ್ಯ ಜೀವನದಲ್ಲಿ ತೊಳಲಾಡುತ್ತೇನೆ ಎಂಬ ಅಂಶಗಳು ಟ್ರೇಲರ್ ನೋಡಿದಾಗ ತಿಳಿದು ಬರುತ್ತೆ. ಈ ಮಹಾನ್ ಕಲಾವಿದ ಚಿತ್ರದಲ್ಲಿ ನಟ ದಿಲೀಪ್ ರಾಜ್ ಅವರಿಗೆ ಇಬ್ಬರು ನಾಯಕಿಯರು.

ದಿಲೀಪ್ ರಾಜ್ ಅವರ ಪತ್ನಿಯ ಪಾತ್ರದಲ್ಲಿ ಜಾಹ್ನವಿ ರಾಯಲ ಕಾಣಿಸಿಕೊಂಡಿದ್ದಾರೆ. ಅದೇ ರೀತಿಯಾಗಿ ಮತ್ತೊಂದು ಪಾತ್ರದಲ್ಲಿ ನಟಿ ಪಲ್ಲವಿ ರಾಜು ಅವರು ನಟಿಸಿದ್ದಾರೆ. ಈ ಚಿತ್ರಕ್ಕೆ ಹಿರಿಯ ಪತ್ರಕರ್ತ ದಿವಂಗತ ಸುರೇಶ್ ಚಂದ್ರ ಅವರ ಮಗ ಅಭಯ್ ಚಂದ್ರ ಆಕ್ಷನ್ ಕಟ್ ಹೇಳ್ತಿದ್ದಾರೆ. ಈ ಹಿಂದೆ ಅಭಯ್ ಚಂದ್ರ ಜವ ಎಂಬ ಸಿನಿಮಾ ನಿರ್ದೇಶನ ಮಾಡಿದ್ರು. ಈ ಮಹಾನ್ ಕಲಾವಿದ ಸಿನಿಮಾ ಇವರಿಗೆ ಎರಡನೇ ಚಿತ್ರವಾಗಿದೆ. ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರೋದು ಹಾಸನ ಮೂಲದ ಭರತ್ ಬಿ.ಗೌಡ ಎಂಬುವವರು. ನಿರ್ದೇಶಕ ಅಭಯ್ ಚಂದ್ರ ಅವರಿಗೆ ನಿರ್ಮಾಪಕ ಭರತ್ ಅವರು ಆನ್ಲೈನ್ ಗೇಮ್ ಮೂಲಕ ಪರಿಚಯವಾಗಿ ಸ್ನೇಹಿತರಾಗಿ ತದ ನಂತರ ಅಭಯ್ ಚಂದ್ರ ಅವರ ಸಿನಿಮಾಗೆ ನಿರ್ಮಾಪಕರಾಗಿದ್ದಾರೆ. ಒಟ್ನಲ್ಲಿ ದಿಲೀಪ್ ರಾಜ್ ಅವರನ್ನೇ ತಲೇಲಿ ಇಟ್ಕೊಂಡು ಈ ಮಹಾನ್ ಕಲಾವಿದ ಸಿನಿಮಾ ಮಾಡಿದ್ದಾರಂತೆ ಅಭಯ್ ಚಂದ್ರ. ಹಾಗಾಗಿ ನಟ ದಿಲೀಪ್ ರಾಜ್ ಅವರು ಕೂಡ ಈ ಚಿತ್ರದ ಬಗ್ಗೆ ನಿರೀಕ್ಷೆ ಇಟ್ಕೊಂಡಿದ್ದಾರೆ.